ಬೆಂಗಳೂರು: ಟೊಮೆಟೊಗೆ ಈಗ ಚಿನ್ನದ ದರ ಬಂದಿದೆ. ಅದೇ ರೀತಿ ಟೊಮೆಟೊ ಬೆಳಗಾರರಿಗೆ ಅದನ್ನು ರಕ್ಷಣೆ ಮಾಡುವುದೇ ಸಾಹಸದ ಮಾತಾಗಿದ್ದು, ಹಲವೆಡೆ ರೈತರು ಸಿಸಿಟಿವಿ ಅಳವಡಿಸಿದ್ದಾರೆ. ಇನ್ನು ಕೆಲ ರೈತರು ತಮ್ಮ ಟೊಮೆಟೊ ಬೆಳೆ ಕಳ್ಳರ ಪಾಲಾಗಿ ತಲೆ ಮೇಲೆ ಕೈಹೊತ್ತು ಕುಳಿತ ಘಟನೆ ನಡೆದಿದೆ. ಅದೇರೀತಿ ಜುಲೈ 8 ರಂದು ಬೆಂಗಳೂರಿನ ಯಲಹಂಕ ಬಳಿಯ ಚಿಕ್ಕಜಾಲ ಗ್ರಾಮದ ಬಳಿ ಸುಮಾರು 2 ಸಾವಿರ ಕೆ.ಜಿ ಗೂ ಅಧಿಕ ಟೊಮೆಟೊ ಇದ್ದ ಬೊಲೆರೋ ವಾಹನವನ್ನ ಖದೀಮರು ಕಳ್ಳತನ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ತಮಿಳುನಾಡು ಮೂಲದ ಭಾಸ್ಕರ್, ಸಿಂಧೂಜಾ ಎಂಬ ಆರೋಪಿಗಳನ್ನು ಆರ್ಎಂಸಿ ಪೊಲೀಸರು ಬಂಧಿಸಿದ್ದು, ತಲೆಮರೆಸಿಕೊಂಡ ಇನ್ನೂ ಮೂವರಿಗಾಗಿ ಹುಡುಕಾಟ ನಡೆಸಿದ್ದಾರೆ.
ಜುಲೈ 8 ಶನಿವಾರದಂದು ರೈತರೊಬ್ಬರು ಅಂದಾಜು 3 ಲಕ್ಷ ಮೌಲ್ಯದ ಟೊಮೆಟೊವನ್ನು ಬೊಲೆರೋದಲ್ಲಿ ತುಂಬಿಕೊಂಡು ಹಿರಿಯೂರಿನಿಂದ ಕೋಲಾರಕ್ಕೆ ಸಾಗಿಸುತ್ತಿದ್ದರು. ಇದನ್ನು ಗಮನಿಸಿದ ಮೂವರು ಅಪರಿಚಿತರು ಕಾರಿನಲ್ಲಿ ಬೊಲೆರೋ ವಾಹನವನ್ನ ಹಿಂಬಾಲಿಸಿಕೊಂಡು ಬಂದಿದ್ದಾರೆ. ಬಳಿಕ ಆರ್ಸಿಎಂ ಯಾರ್ಡ್ ಠಾಣೆಯ ವ್ಯಾಪ್ತಿಯಲ್ಲಿ ಅಡ್ಡಗಟ್ಟಿ, ನಿಮ್ಮ ವಾಹನದಿಂದ ನಮ್ಮ ಕಾರಿಗೆ ಟಚ್ ಮಾಡಿದ್ದೀರಿ ಎಂದು ನಾಟಕವಾಡಿ, ರೈತ ಮತ್ತು ಬೊಲೆರೋ ಚಾಲಕನಿಗೆ ಹಲ್ಲೆ ಮಾಡಿ, ಬೊಲೆರೋವನ್ನ ತೆಗೆದುಕೊಂಡು ಎಸ್ಕೇಪ್ ಆಗಿದ್ದರು. ಈ ಕುರಿತು ರೈತರು ಠಾಣೆಗೆ ದೂರು ದಾಖಲಿಸಿದ್ದರು.
ಇನ್ನು ಟೊಮೆಟೊ ತುಂಬಿದ ಬೊಲೆರೋ ಕಳ್ಳತನ ಮಾಡಿದ ಖದೀಮರು, ತಮ್ಮ ನಿವಾಸದಲ್ಲಿ ಕೂತು ಪ್ಲ್ಯಾನ್ ಮಾಡಿ ಬಳಿಕ ಚೆನ್ನೈ ಮಾರುಕಟ್ಟೆಗೆ ಹೋಗಿ ಟೊಮೆಟೊವನ್ನ ಮಾರಾಟ ಮಾಡಿದ್ದಾರೆ. ನಂತರ ಖಾಲಿ ವಾಹನವನ್ನು ತಂದು ನಿಲ್ಲಿಸಿ ಪರಾರಿಯಾಗಿದ್ದರು. ಇದೀಗ ಆರ್ಎಂಸಿ ಯಾರ್ಡ್ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಇನ್ನುಳಿದ ಮೂವರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.