ಉಳ್ಳಾಲ : ಆಟೋ ಟೆಂಪೊ ಚಾಲಕರೋರ್ವರು ತಾನು ಟೆಂಪೋ ಇರಿಸುತ್ತಿದ್ದ ಹೊಟೇಲ್ ಮಾಲಕರ ಮನೆಯಂಗಳದ ಬಾವಿಗೆ ಬಿದ್ದು ಆತ್ಮಹತ್ಯೆಗೈದ ಘಟನೆ ತೊಕ್ಕೊಟ್ಟು ಒಳಪೇಟೆಯ ಸಂತ ಸೆಬೆಸ್ತಿಯನ್ ಚರ್ಚ್ ಬಳಿ ನಡೆದಿದೆ.
ತೊಕ್ಕೊಟ್ಟು, ಕೃಷ್ಣ ನಗರ, ಲಚ್ಚಿಲ್ ನಿವಾಸಿ ನಾಗೇಶ್ (62) ಆತ್ಮಹತ್ಯೆಗೈದ ದುರ್ದೈವಿ. ನಾಗೇಶ್ ಗೂಡ್ಸ್ ಆಟೋ ಟೆಂಪೊ ಚಲಾಯಿಸುತ್ತಿದ್ದರು. ಟೆಂಪೋವನ್ನ ನಾಗೇಶ್ ಅವರು ಒಳಪೇಟೆಯ ಚರ್ಚ್ ಮುಂಭಾಗದ ಗಣೇಶ್ ಭವನ ಹೊಟೇಲು ಮಾಲಕರ ಮನೆಯಂಗಳದಲ್ಲೇ ನಿತ್ಯವೂ ರಾತ್ರಿ ನಿಲ್ಲಿಸುತ್ತಿದ್ದರು. ಇಂದು ಬೆಳಗ್ಗೆ ನಾಗೇಶ್ ಅವರು ಟೆಂಪೋ ತೆಗೆಯದೆ ನಾಪತ್ತೆಯಾಗಿದ್ದು ಸಂಪರ್ಕಕ್ಕೆ ಸಿಕ್ಕಿರಲಿಲ್ಲ.
ಮನೆಯಂಗಳದಲ್ಲಿ ನಿಲ್ಲಿಸಿದ್ದ ಟೆಂಪೋ ಸೀಟಲ್ಲಿ ನಾಗೇಶ್ ಅವರ ಮೊಬೈಲ್, ನಗದು , ಫೋಟೊ, ಚಪ್ಪಲಿ ದೊರಕಿದ್ದು ಅನುಮಾನಗೊಂಡ ಮನೆ ಮಂದಿ, ಸ್ಥಳೀಯರು ಬಾವಿಯಲ್ಲಿ ಹುಡುಕಾಟ ನಡೆಸಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಗಳು ಬಾವಿಯಲ್ಲಿ ನಾಗೇಶ್ ದೇಹವಿರುವುದನ್ನು ಪತ್ತೆ ಮಾಡಿದ್ದು ಮೃತದೇಹವನ್ನ ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಮೃತ ನಾಗೇಶ್ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ತನಗಿದ್ದ ಅನಾರೋಗ್ಯದ ಬಗ್ಗೆ ಚಿಂತಿತರಾಗಿದ್ದರು. ಹಲವು ಸಂಘಟನೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಅವರು ತೊಕ್ಕೊಟ್ಟಿನ ನಿತ್ಯಾನಂದ ಯುವಕ ಮಂಡಲದ ಮಾಜಿ ಅಧ್ಯಕ್ಷರಾಗಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನ ಅಗಲಿದ್ದಾರೆ