Site icon newsroomkannada.com

ಇಸ್ರೇಲ್‌ ನಲ್ಲಿರುವ ಭಾರತೀಯರನ್ನು ಕರೆತರಲು ‘ಆಪರೇಷನ್ ಅಜಯ್’

ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ ಯುದ್ಧ ಪೀಡಿತ ಇಸ್ರೇಲ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ‘ಆಪರೇಷನ್ ಅಜಯ್’ ಆರಂಭಿಸುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಬುಧವಾರ ಘೋಷಿಸಿದ್ದಾರೆ.

ಇಸ್ರೇಲ್‌ನಿಂದ ಹಿಂದಿರುಗಲು ಬಯಸುವ ಭಾರತದ ನಾಗರಿಕರಿಗೆ ಅನುಕೂಲವಾಗುವಂತೆ ‘ಆಪರೇಷನ್ ಅಜಯ್’ ಅನ್ನು ಪ್ರಾರಂಭಿಸಲಾಗುತ್ತಿದ್ದು, ವಿಶೇಷ ಚಾರ್ಟರ್ ವಿಮಾನಗಳು ಮತ್ತು ಇನ್ನಿತರ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಜೊತೆಗೆ ನಮ್ಮ ಪ್ರಜೆಗಳ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಸಂಪೂರ್ಣವಾಗಿ ಬದ್ಧವಾಗಿದೆ” ಎಂದು ಜೈಶಂಕರ್ ಅವರು ಟ್ವೀಟ್ ಮಾಡಿದ್ದಾರೆ.

ಇಸ್ರೇಲ್​ ಹಾಗೂ ಹಮಾಸ್ ಉಗ್ರಗಾಮಿಗಳ ಯುದ್ಧ ಮುಂದುವರೆದಿದೆ. ಈ ಹಿನ್ನಲೆ ಪ್ರತೀಕಾರ ತೀರಿಸಿಕೊಳ್ಳಲು ಇಸ್ರೇಲ್ ಬೃಹತ್ ಸೇನಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಪರಿಣಾಮ ಭಾರತೀಯ ಪ್ರಜೆಗಳ ಸುರಕ್ಷತೆಯ ಬಗ್ಗೆ ಇದೀಗ ಕಳವಳ ವ್ಯಕ್ತಪಡಿಸಲಾಗಿದ್ದು, ಇಸ್ರೇಲ್‌ನಲ್ಲಿ ನೆಲೆಸಿರುವ 18,000 ಭಾರತೀಯ ಪ್ರಜೆಗಳಲ್ಲಿ ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

ಈ ಬಗ್ಗೆ ಇದುವರೆಗೆ ಯಾವುದೇ ಮನವಿಗಳು ಬಂದಿಲ್ಲವಾದ್ದರಿಂದ ನಾಗರಿಕರನ್ನು ಸ್ಥಳಾಂತರಿಸುವ ಯಾವುದೇ ಯೋಜನೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು. ಭಾರತೀಯರಲ್ಲಿ ಸುಮಾರು 900 ಭಾರತೀಯ ವಿದ್ಯಾರ್ಥಿಗಳು, ಹಿರಿಯರ ಆರೈಕೆ ಮಾಡುವವರು, ವಜ್ರದ ವ್ಯಾಪಾರಿಗಳು ಸೇರಿದಂತೆ ಐಟಿ ವೃತ್ತಿಪರರು ಇದ್ದಾರೆ. ಇದೀಗ ಭಾರತ ಸರ್ಕಾರ ಅವರನ್ನು ಕರೆತರಲು ಆಪರೇಷನ್​ ಅಜಯ್​ ಅನ್ನು ಪ್ರಾರಂಭಿಸಿದೆ.

Exit mobile version