ಸುಳ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರ ಬಗ್ಗೆ ನಿಂದನಾತ್ಮಕ ಬರಹ ಬರೆದು ಜಾಲತಾಣದಲ್ಲಿ ಹಂಚಿರುವುದು ಹಾಗೂ ಗರ್ಭಗುಡಿಯ ಫೋಟೊ ತೆಗೆದ ಆರೋಪದಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ ವರ್ಗದವರು ಹಾಗೂ ಒಳಾಂಗಣ ನೌಕರರು ಪೊಲೀಸರಿಗೆ ದೂರು ನೀಡಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಗರ್ಭಗುಡಿಯ ಪೋಟೋ ತೆಗೆಯಲು ನಿಷೇಧವಿದ್ದರೂ ಕುಲ್ಕುಂದದ ವ್ಯಕ್ತಿಯೊಬ್ಬರು ಗರ್ಭಗುಡಿಯ ಪೋಟೋ ತೆಗೆದಿದ್ದಾರೆ. ಅಲ್ಲದೆ, ಈ ಫೋಟೋವನ್ನು ಕುಕ್ಕೆ ಶ್ರೀ ದೇವಾಲಯ ಉಳಿಸಿ, ಶೈವಾಗಮ ಕ್ಷೇತ್ರ ಶ್ರೀ ಕುಕ್ಕೆ ವಾಟ್ಸಾಪ್ ಗ್ರೂಪ್ ಗಳಲ್ಲಿ ಹಂಚಿಕೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದಲ್ಲದೆ ಅರ್ಚಕರು, ಪುರೋಹಿತರನ್ನು ಉದ್ದೇಶಿಸಿ ಅವ್ಯಾಚ ಶಬ್ದಗಳನ್ನು ನಿಂದನಾತ್ಮಕವಾಗಿ ಬರೆದು ಇಲ್ಲಿನ ಅರ್ಚಕರನ್ನು ತೇಜೋವಧೆ ಮಾಡುವ ಬರಹಗಳನ್ನು ಬರೆದಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ತುಪ್ಪ ಕಳವು ಆಗುತ್ತಿದೆಯೆಂಬ ಆರೋಪ: ದೇವಸ್ಥಾನದಲ್ಲಿ ತುಪ್ಪ ಕಳವಾಗುತ್ತಿರುವ ಬಗ್ಗೆ ಮೂರು ಬಾರಿ ದೂರು ಕೊಟ್ಟರೂ ಕಮಿಷನ್ ಆಸೆಯಿಂದ ಕಾರ್ಯ ನಿರ್ವಹಣಾಧಿಕಾರಿ ಪೊಲೀಸರಿಗೆ ದೂರು ನೀಡಿಲ್ಲ. ಕದ್ದ ತುಪ್ಪದಲ್ಲಿ ಅವರಿಗೂ ಪಾಲು ಇರಬಹುದು ಎಂಬ ಬರಹಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಬಗ್ಗೆ ದೇಗುಲದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಿಂಗಯ್ಯ ಪ್ರತಿಕ್ರಿಯಿಸಿದ್ದು, ವಾಟ್ಸಪ್ ನಲ್ಲಿ ಹರಿದಾಡಿದ ವಿಚಾರ ನನ್ನ ಗಮನಕ್ಕೂ ಬಂದಿದೆ, ನಮ್ಮ ಆಡಳಿತ ಸಮಿತಿಯಿಂದಲೂ ದೂರು ನೀಡಲಾಗಿದೆ ಎಂದಿದ್ದಾರೆ.