ಬೆಂಗಳೂರು: ಕ್ರಿಕೆಟ್ ಆಡಿದ ಬಳಿಕ ಮೈದಾನದಲ್ಲಿ ಹೃದಯಘಾತದಿಂದ ಕರ್ನಾಟಕದ ವೇಗಿ ಕೆ.ಹೊಯ್ಸಳ ಹಠಾತ್ ಸಾವನ್ನಪ್ಪಿದ್ದಾರೆ. ಏಜಿಸ್ ಸೌತ್ ಝೋನ್ ಟೂರ್ನಿಯ ವೇಳೆ ದುರ್ಘಟನೆ ಸಂಭವಿಸಿದ್ದು, ಕೆ.ಹೊಯ್ಸಳ ಅವರ ಅಭಿಮಾನಿಗಳಲ್ಲಿ ದುಃಖ ಮಡುಗಟ್ಟಿದೆ.
ಕೆ.ಹೊಯ್ಸಳ ಅವರ ಸಾವು ಕರ್ನಾಟಕ ಕ್ರಿಕೆಟ್ಗೆ ತುಂಬಲಾರದ ನಷ್ಟವಾಗಿದೆ. ಹೊಯ್ಸಳ ಇಂದು ಕರ್ನಾಟಕ ಏಜಿಸ್ ತಂಡದ ಪರ ಆಡುತ್ತಿದ್ದರು. ತಮಿಳುನಾಡು ವಿರುದ್ಧ ಗೆದ್ದ ಬಳಿಕ ತಂಡದ ಸಭೆ ಕರೆಯಲಾಗಿತ್ತು. ಪಂದ್ಯದ ಬಳಿಕ ವಿಶ್ರಾಂತಿ ಪಡೆದಿದ್ದ ಕೆ.ಹೊಯ್ಸಳ ತಮ್ಮ ಸಹ ಆಟಗಾರರ ಜೊತೆ ಸಭೆಗೆ ತೆರಳಿದ್ದರು.
ಸಭೆ ನಡೆಯುತ್ತಿರುವ ವೇಳೆ ಕೆ. ಹೊಯ್ಸಳ ಅವರು ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಸ್ಥಳದಲ್ಲಿದ್ದ ವೈದ್ಯರು ಚಿಕಿತ್ಸೆ ನೀಡಿದ್ದು ಕೂಡಲೇ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಆದರೆ ದುರಾದೃಷ್ಟವಶಾತ್ ವೈದ್ಯರು ತಪಾಸಣೆ ನಡೆಸಿ ಬಳಿಕ ಹೊಯ್ಸಳ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ವರದಿ ನೀಡಿದ್ದಾರೆ ಎಂದು ವರದಿಯಾಗಿದೆ.
ಕೆ. ಹೊಯ್ಸಳ ಅವರು ಕರ್ನಾಟಕ ಪ್ರೀಮಿಯರ್ ಲೀಗ್ನಲ್ಲಿ ಶಿವಮೊಗ್ಗ ಹಾಗೂ ಬಳ್ಳಾರಿ ಟಸ್ಕರ್ಸ್ ತಂಡವನ್ನ ಪ್ರತಿನಿಧಿಸಿದ್ದರು. ಕರ್ನಾಟಕ ಜೂನಿಯರ್ ತಂಡದ ಪರ ಕೂಡ ಆಡಿದ್ದಾರೆ ಎನ್ನಲಾಗಿದೆ.